ಬಿಸಿಲು -ಬೆವರಿನ ಮಧ್ಯೆ ಮರೆಯಾದ ಚಿನ್ನ


ಚಿನ್ನದ ಮೇಲಿನ ಮೋಹ ಇಂದು ನಿನ್ನೆಯದೇನಲ್ಲ. ಚಿನ್ನದ ಹುಡುಕಾಟ ಕೂಡ. ಉತ್ತರ ಪ್ರದೇಶದ  ’ಉನ್ನಾವ’ದಲ್ಲಿ ಕನಸಿನಲ್ಲಿ ಕಂಡ ಚಿನ್ನ ಹುಡುಕುತ್ತ ಪಿಕಾಸಿ ಹಿಡಿಯಲು ಹೊರಟ ಉದಾರಣೆ ತೀರಾ ಇತ್ತೀಚಿನದು. ಕಲಾವಿದ ಚಾರ್ಲಿ ಚಾಪ್ಲಿನ್ ಚಿನ್ನದ ಬೇಟೆಯನ್ನು ಕುರಿತೇ ’ಗೋಲ್ಡ್ ರಷ್’ ಸಿನಿಮಾ ಮಾಡಿದ್ದ. ಕಂಬಾರರ ’ಸೂರ್ಯ ಶಿಕಾರಿ’ಯಲ್ಲಿ ಚಿನ್ನ ಹುಡುಕುತ್ತ ಹೊರಟ ದಾರಿ ತಪ್ಪಿದ ಕಥೆಯಿದೆ. ಕರ್ನಾಟಕದ ಈಶಾನ್ಯ ‘ಾಗದಲ್ಲಿ ಹಳದಿಲೋಹದ ನೆಲೆಯಿತ್ತು. ಅದನ್ನು ಹುಡುಕುತ್ತ ಬಂದವರೇ ಚರಿತ್ರೆಯ ಪುಟ ಸೇರಿದ್ದಾರೆ.
ಗೋದಾವರಿಯ ದಕ್ಷಿಣ ತೀರದಿಂದ ಕಾವೇರಿಯ ಉತ್ತರದ ವರೆಗೆ ಚಾಚಿಕೊಂಡಿರುವ ದಖನ್ ಕವಿಗಳಿಗೂ ರಾಜರಿಗೂ ’ಮಾರ್ಗ’ ಕಲ್ಪಿಸಿದ ದೇಸಿ ನೆಲ. ಈ ದಖನ್ ದೆಹಲಿಯ ನಿದ್ದೆ ಕೆಡಿಸಿದ ಪ್ರದೇಶ. ದೆಹಲಿಯ ದೊರೆಗಳಿಗೆ ಸೆರೆ ಸಿಕ್ಕಂತೆ ಭಾಸವಾದರೂ ಕೈಗೆಟುಕದ ನೆಲ. ದೆಹಲಿಯ ದೊರೆಗಳಿಗೆ ಮಾತ್ರ ಯಾಕೆ ಭಾರತವನ್ನು ಅಖಂಡವಾಗಿಸಿದ ಸಾಮ್ರಾಟ್‌ರಿಗೂ ದಖನ್ ಅರ್ಥವಾಗದ, ಅರ್ಥೈಸಿಕೊಳ್ಳಲಾಗದ ಮತ್ತು ಸಂಪೂರ್ಣ ದಕ್ಕದ ಭೂಭಾಗ. ಒಡಲಲ್ಲಿ  ಅಪಾರ ಪ್ರಮಾಣದ ಸಂಪತ್ತು ಇಟ್ಟುಕೊಂಡಿದ್ದ  ದಖನ್ ಕೇವಲ ಮಹತ್ವಾಕಾಂಕ್ಷಿ ದೊರೆಗಳ ಗಮನ ಸೆಳೆದಿರಲಿಲ್ಲ. ವ್ಯಾಪಾರಿಗಳು, ವಿದ್ವಾಂಸರು, ಕವಿಗಳು, ಕಲಾವಿದರಿಗೆ ದಖನ್‌ನತ್ತ ಮುಖ ಮಾಡುವದಕ್ಕೆ ಹಲವು ಕಾರಣಗಳಿದ್ದವು. ಅವುಗಳಲ್ಲಿ ಹೊಳೆಯುವ ಹಳದಿಲೋಹದ ನೆಲ-ನೆಲೆ ಎಂಬ ಕಾರಣವೂ ಇತ್ತು. ಅದು ಪ್ರಮುಖವಾಗಿತ್ತು. ಹಳದಿ ಬಣ್ಣದ ಲೋಹ ಹುಡುಕುತ್ತ ಬಂದವರ ದೊಡ್ಡ ಪರಂಪರೆಯೇ ಇದೆ. ಹೀಗೆ ಬಂದವರು ಮತ-ಧರ್ಮ- ಕಲೆ- ಸಂಸ್ಕೃತಿ- ಚಿಂತನೆಗಳ ಮುಖಾಮುಖಿಯಲ್ಲಿ ತಾವೂ ಬೆಳೆದರು -ಬದಲಾದರು. ಮತ್ತು ದಖನ್‌ನ್ನೂ ಬದಲಾಯಿಸಿದರು- ಬೆಳೆಸಿದರು.  ಇದ್ದವರು ಮತ್ತು ಬಂದವರ ನಡುವಿನ ಕೊಡುಕೊಳ್ಳುವಿಕೆಯಿಂದ ಹುಟ್ಟಿದ ಹೊಸ ನೇಯ್ಗೆಯು ವರ್ಣರಂಜಿತವೂ ವೈವಿಧ್ಯಮಯವೂ ಆಯಿತು. ಸಂಸ್ಕೃತಿಯ ಬಟ್ಟೆಯಲ್ಲಿ  ಸೇರಿದ ಎಳೆಗಳ ಹುಡುಕುವುದು ಸೊಗಸಾದ ಅನುಭವ. ಎಳೆಯಾಗುವ ಮುನ್ನ ಆದ -ಪಡೆದ ರೂಪಾಂತರ ಎಂತಹವರನ್ನೂ ಬೆರಗುಗೊಳಿಸುತ್ತದೆ. ಕನ್ನಡ, ಮರಾಠಿ, ತೆಲುಗು ಮಾತುಗಳ ಜೊತೆ ಬೆರೆತ ಫಾರಸಿ, ಅರಬ್ಬಿ, ಉರ್ದು ಹುಟ್ಟಿಸಿದ ಲೋಕದ ಬೆಡಗು ಮಾತಿಗೆ ನಿಲುಕದ್ದು.
ದಖನ್ ಪ್ರಸ್ಥಭೂಮಿಯ ಮಧ್ಯಭಾಗದಲ್ಲಿ ಬರುವ ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂಬ ಸಂಗತಿ ಚಂದ್ರಗುಪ್ತನ ಮೌರ್ಯನ ಕಾಲದಿಂದಲೂ ದಾಖಲೆಗಳಲ್ಲಿದೆ. ಚಂದ್ರಗುಪ್ತ ವೌರ್ಯ ಸಿಂಹಾಸನ ಏರುವುದಕ್ಕೆ ಕಾರಣನಾದ ಮಹಾಮಂತ್ರಿ ಚಾಣಕ್ಯನ ’ಅರ್ಥಶಾಸ್ತ್ರ’ದಲ್ಲಿ  ದಕ್ಷಿಣ ದೇಶದಲ್ಲಿ ಚಿನ್ನ ದೊರೆಯುವುದರ ಪ್ರಸ್ತಾಪ ಇದೆ. ಚಿನ್ನದ ನೆಲೆ ಹುಡುಕುತ್ತ ಜನ ಉತ್ತರದಿಂದ ದಕ್ಷಿಣದ ಕಡೆಗೆ ಮುಖಮಾಡಿ ಪ್ರಯಾಣ ಬೆಳೆಸುತ್ತಿದ್ದರು ಎಂಬ ಉಲ್ಲೇಖ ಇದೆ. ಚಂದ್ರಗುಪ್ತನ ಮೊಮ್ಮಗ ಸಾಮ್ರಾಟ್ ಅಶೋಕ ಯುವರಾಜನಾಗಿದ್ದ ಸಂದರ್ಭದಲ್ಲಿ ಕಟ್ಟಿದ- ಕಟ್ಟಬಯಸಿದ  ’ಸುವರ್ಣಗಿರಿ’ ಎಲ್ಲಿದ್ದಿರಬಹುದು ಎಂಬ ಜಿಜ್ಞಾಸೆ  ಇದ್ದೇ ಇದೆ. ಬಹಳಷ್ಟು ಕಾಲ ಸುವರ್ಣಗಿರಿ ಎಂಬುದು ಒಂದು ಕಾಲ್ಪನಿಕ ನಗರ. ವಾಸ್ತವವಾಗಿ ಅಂತಹ ನಗರ ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂಬ ಮಾತು ಚಾಲ್ತಿಯಲ್ಲಿತ್ತು. ದಿನಕಳೆದಂತೆ ಚರಿತ್ರೆಯಲ್ಲಿ ಸೇರುವ ಹೊಸ ಪುಟಗಳು ನಡೆಯುವ ಬದಲಾವಣೆಗಳು ಸುವರ್ಣಗಿರಿಯು ಈಗ ಕರ್ನಾಟಕದ ಈಶಾನ್ಯ ಭಾಗದಲ್ಲಿಯೇ ಇದ್ದಿರಬಹುದು ಎಂಬ ನಿಲುವಿನತ್ತ ಹೊರಳುವುದಕ್ಕೆ ಕಾರಣವಾಗಿವೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.
’ದೇವನಾಂಪ್ರಿಯ’ ಬಿರುದು ಅಶೋಕನದೇ ಎಂದು ಸಾಬೀತು ಪಡಿಸುವ ಐತಿಹಾಸಿಕ ಮಹತ್ವದ ಮಸ್ಕಿ ಶಾಸನ ಇರುವ ಪ್ರದೇಶದ ಹತ್ತಿರದಲ್ಲಿಯೇ ಇರುವ ಕನಕಗಿರಿಯೇ ಸುವರ್ಣಗಿರಿ ಆಗಿದ್ದಿರಬಹುದೇ? ಎಂಬುದು ಒಂದು ವಾದ. ಈ ವಾದಕ್ಕೆ ಇಂಬು ಕೊಡುವಂತೆ ಮಸ್ಕಿ- ಕನಕಗಿರಿಗಳಿಗೆ ಸಮೀಪದಲ್ಲಿಯೇ ಚಿನ್ನದ ಗಣಿ ಇರುವ ಹಟ್ಟಿ ಇದೆ. ಅಶೋಕನ ಅತಿ ಹೆಚ್ಚು ಶಾಸನಗಳು ದೊರೆತ ಕೊಪ್ಪಳವು ಹಟ್ಟಿಯು ಕನಕಗಿರಿ- ಮಸ್ಕಿಗಳಿಗೆ ಸಮೀಪದಲ್ಲಿರುವ ಪ್ರದೇಶ.
ದೇಶದಾದ್ಯಂತ ದೊರೆತಿರುವ ಅಶೋಕನ ಶಾಸನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಮೇಜರ್ ರಾಕ್ ಎಡಿಕ್ಟ್ ಮತ್ತು ಮೈನರ್ ಎಡಿಕ್ಟ್ ಎಂದು. ಭೀಮಾನದಿಯ ದಂಡೆಗುಂಟ ಇರುವ ಸನ್ನತಿಯಲ್ಲಿ ದೊರೆತ ಶಾಸನವು ಈ ಎರಡೂ ಗುಂಪಿಗೆ ಸೇರದ್ದು. ಅದನ್ನು ’ಸ್ಪೇಷಲ್ ರಾಕ್ ಎಡಿಕ್ಟ್ ’ ಎಂದು ಗುರುತಿಸಲಾಗುತ್ತದೆ. ಸನ್ನತಿಯ ಚಂದ್ರಲಾಂಬಾ ದೇವಾಲಯದ ಆವರಣದಲ್ಲಿ ಇದ್ದ ಕಾಳಿಕಾ ವಿಗ್ರಹದ ಪಾಣಿಪೀಠವಾಗಿದ್ದ ದೊಡ್ಡ ಕಲ್ಲಿನಲ್ಲಿ ಎರಡೂ ಬದಿಗೆ ಕೆತ್ತಲಾದ ಶಾಸನವು ಅಪರೂಪದ್ದು. ಸನ್ನತಿಯಿಂದ ಕೂಗಳತೆ ದೂರದಲ್ಲಿಯೇ ಕನಗನಹಳ್ಳಿ ಎಂಬ ಪುಟ್ಟ ಹಳ್ಳಿ ಇದೆ. ಅದೇ ಸುವರ್ಣಗಿರಿ ಆಗಿದ್ದಿರಬಹುದೇ ಎಂಬುದು ಹೊಸ ಚರ್ಚೆ. ಕನಗನಹಳ್ಳಿಯಲ್ಲಿ ಇತ್ತೀಚಿಗೆ ದೊರೆತ ಬೌದ್ಧಸ್ತೂಪದಲ್ಲಿನ ಕೆತ್ತನೆಗಳಲ್ಲಿ ಅಶೋಕನ ಪ್ರತಿಮೆ ಇದೆ. ಚಿತ್ರದ ಕೆಳಭಾಗದಲ್ಲಿ ’ರಾಯ ಅಸೋಕ’ ಎಂದು ದಾಖಲಿಸಲಾಗಿದೆ. ಸಾಂಚಿಯ ಸ್ತೂಪದಲ್ಲಿ ಇರುವ ಉಬ್ಬುಶಿಲ್ಪ ಅಶೋಕನ ಚಿತ್ರ ಎಂದು ನಂಬಲಾಗಿತ್ತು. ಕನಗನಹಳ್ಳಿಯಲ್ಲಿ ದೊರೆತ ಶಿಲ್ಪದ ಜತೆಯಲ್ಲಿಯೇ ಅಶೋಕನ ಹೆಸರೂ ದಾಖಲಾಗಿರುವುದು ವಿಶೇಷ.
ಅಶೋಕ ಯುವರಾಜನಾಗಿದ್ದ ದಿನಗಳಲ್ಲಿ ದಕ್ಷಿಣದ ಭಾಗಗಳಲ್ಲಿ  ಓಡಾಡಿರಬಹುದು ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆಗಳಿಲ್ಲ. ಆದರೆ, ದಖನ್ ಬಗ್ಗೆ  ಒಲವು ಅಶೋಕನಿಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅದು ಹಲ ರೀತಿ-ಬಗೆಗಳಲ್ಲಿ ದಾಖಲಾಗಿದೆ. ಯುವರಾಜರಿಗೂ ದಖನ್‌ಗೂ ಅದೇನೋ ವಿಶೇಷ ನಂಟು. ದೆಹಲಿಯಿಂದ ದೇವಗಿರಿಗೆ ರಾಜಧಾನಿ ಸ್ಥಳಾಂತರಿಸಿದ ದೊರೆ ಮಹಮದ್ ಬಿನ್ ತುಘಲಕ್ ಯುವರಾಜನಾಗಿದ್ದಾಗ ದಖನ್‌ನ ಉಸ್ತುವಾರಿ ಹೊತ್ತಿದ್ದ.  ದೊರೆಯಾಗುವ ಮುನ್ನ  ದಖನ್  ಪ್ಯಾಂತ್ಯದ ಆಡಳಿತಾಕಾರಿ ಆಗಿದ್ದ ಉಲುಗ್‌ಖಾನ್  ಈ ಪ್ರದೇಶದಲ್ಲಿ ಇದ್ದ ದಿನಗಳಲ್ಲಿಯೇ ದೇವಗಿರಿಯಲ್ಲಿ ತನ್ನ ಕನಸಿನ ಕೋಟೆ ಕಟ್ಟಿದ್ದ. ತಾನೇ ಕಟ್ಟಿದ ಕೋಟೆಯ ಮೇಲಿನ ಮೋಹ ಸುಲ್ತಾನ್ ಆದ ಮೇಲೆ ಸೆಳೆತವಾಯಿತು. ಹರಯದ ದಿನಗಳನ್ನು ಕಳೆದ ದಖನ್ ಮೇಲಿನ ಪ್ರೀತಿ ರಾಜಧಾನಿಯ ಸ್ಥಳಾಂತರಕ್ಕೂ ಕಾರಣವಾಗಿರಬೇಕು. ಕನಸಿನ ಕೋಟೆಯ ಬಂಯಾದ ತುಘಲಕ್ ಹೆಚ್ಚು ಕಾಲ ದೊರೆಯಾಗಿ ಈ ಪ್ರದೇಶದಲ್ಲಿ ಇರಲಾಗಲಿಲ್ಲ. ಮರಳಿ ದೆಹಲಿಗೆ ತೆರಳಿದ. ಮೊಗಲ್‌ರ ಕೊನೆಯ ಮಹತ್ವದ ದೊರೆ ಆಲಂಗೀರ್ ಔರಂಗಜೇಬ್ ಯುವರಾಜನಾಗಿದ್ದಾಗ ದಖನ್ ಪ್ರಾಂತ್ಯದ ಅಕಾರಿಯಾಗಿದ್ದ. ದಖನ್‌ನ ಸೆಳೆತ ದೆಹಲಿ ಗದ್ದುಗೆ ಏರಿದ ಮೇಲೆಯೂ ಮುಂದುವರೆದಿತ್ತು. ಅದು ಕೆಲವೊಮ್ಮೆ  ದುಸ್ವಪ್ನವೂ ಆಗಿತ್ತು. ಔರಂಗಜೇಬ್ ತನ್ನ ಕೊನೆಯ ದಿನಗಳನ್ನು ಕಳೆದದ್ದು ದಖನ್‌ನಲ್ಲಿಯೇ. ಔರಂಗಜೇಬ್ ದಾಳಿ ನಡೆಸಿದಾಗ ಸುರಪುರದ ಬೇಡ ದೊರೆಗಳು ಅದಕ್ಕೆ ಪ್ರತ್ಯುತ್ತರವಾಗಿ ’ಗೆರಿಲ್ಲಾ’ ಯುದ್ದತಂತ್ರ ಬಳಸಿ ಸುಸ್ತಾಗಿಸಿದರು. ವಾಗನಗೇರಿಯಲ್ಲಿ ನಡೆದ ಕದನದಲ್ಲಿ ತೀವ್ರವಾಗಿ ಗಾಯಗೊಂಡ ಔರಂಗಜೇಬ್‌ನನ್ನು ಆನೆಯ ಮೇಲೆ ಹಾಕಿ ಕೊಂಡೊಯ್ಯಲಾಯಿತು. ದೊರೆ ದೆಹಲಿ ತಲುಪಲಿಲ್ಲ. ದೌಲತಾಬಾದ್ ಬಳಿಯಲ್ಲಿ ಅಸು ನೀಗಿದ. ಅದೇ ನಂತರ ಔರಂಗಾಬಾದ್ ಆಯಿತು. ದಖನ್‌ನ ಕೀಲಿ ಕೈ ಬೀದರ್ ಎನ್ನುತ್ತಿದ್ದ  ಔರಂಗಜೇಬ್ ತನ್ನ ಮಗನಿಗೆ ಬೀದರ್‌ಭಕ್ಷ್ ಎಂದು ಹೆಸರಿಟ್ಟಿದ್ದ. ಬೀದರ್ ಎಂದರೆ ಫಾರಸಿಯಲ್ಲಿ ಚೈತನ್ಯ ಎಂದರ್ಥ.
ಮುಸ್ಲಿಂ ದೊರೆಗಳು ದಕ್ಷಿಣದತ್ತ ಬರಲು ಮನಸ್ಸು ಮಾಡುವುದಕ್ಕೆ ಈ ಭಾಗದಲ್ಲಿ  ಇದ್ದಿತ್ತೆನ್ನಲಾದ ಅಪಾರ ಸಂಪತ್ತೇ ಕಾರಣ. ದಕ್ಷಿಣದ ಜನರ ಬಳಿ ಇದ್ದ  ಚಿನ್ನವು ಉತ್ತರದ ಜನರ ಗಮನ ಸೆಳೆದಿತ್ತು. ಅಲಾವುದ್ದೀನ್ ಖಿಲ್ಜಿಯು ದಕ್ಷಿಣದತ್ತ ದಂಡಯಾತ್ರೆ ಮಾಡಲು ಚಿನ್ನವೇ ಕಾರಣವಾಗಿತ್ತು. ’ಪ್ರತಿಯೊಂದು ಮನೆಯಲ್ಲಿಯೂ ವಜ್ರಗಳ ರಾಶಿ ಇರುತ್ತಿತ್ತು. ಚಿನ್ನ ಬೆಳ್ಳಿ ತುಂಬಿ ತುಳುಕುತ್ತಿತ್ತು. ಎಲ್ಲ ಕಡೆಯೂ ರೇಷ್ಮೆಯ ಭಾರೀ ಸಂಗ್ರಹ ಇರುತ್ತಿತ್ತು. ಇನ್ನೂ ಹಲವು ಬಗೆಯ ಸಂಪತ್ತು ಇತ್ತು. ಬಹು ಆಕರ್ಷಕ ಮಾದರಿಯ ಬಟ್ಟೆಗಳಿದ್ದವು. ಇಂತಹ ಅಪೂರ್ವ ವೈವಿಧ್ಯವನ್ನು ದೇವಗಿರಿಯಲ್ಲದೆ ಬೇರೆಲ್ಲಿ ಕಾಣಲಾದೀತು?’ ಕವಿ ಮಲಿಕ್ ಇಸಾಮಿಯು ’ಫುತೂಹ್ ಅಸ್ ಸಲಾತಿನ್’ನಲ್ಲಿ ದಾಖಲಿಸಿದ್ದಾನೆ.
’ಹೈದರಾಬಾದ್ ಕರ್ನಾಟಕ’ ಅಥವಾ ’ಕಲ್ಯಾಣ ಕರ್ನಾಟಕ’ ಎಂದು ಗುರುತಿಸಲಾಗುವ ರಾಜ್ಯದ ಈಶಾನ್ಯ ಭಾಗ ಚಿನ್ನ ಮತ್ತು ಬಿಸಿಲುಗಳೆರಡನ್ನೂ ಪಡೆದಿರುವ ಪ್ರದೇಶ. ಸಾವಿರಕ್ಕೂ ಹೆಚ್ಚು ವರುಷಗಳಿಂದ ಚಿನ್ನದ ಒಡನಾಟ ಇದ್ದರೂ ಇಲ್ಲಿಯ ಜನ ಬೆಳದಿಂಗಳಿಗಿಂತ ಬಿಸಿಲನ್ನೇ ಹೆಚ್ಚು ಕಂಡವರು. ವಾಸ್ತವವಾಗಿ ನೋಡಿದರೆ ಬಿಸಿಲ ಬೆಳಕು ಚಿನ್ನದ ಹೊಳಪನ್ನು ಹೆಚ್ಚಿಸಬೇಕಿತ್ತು. ಆದರೆ, ಉರಿಬಿಸಿಲ ಬೆಳಕು ಕಣ್ಣ ಮಂಜಾಗಿಸಿದ್ದೇ ಹೆಚ್ಚು. ಬಿಸಿಲ ಆರ್ಭರ್ಟವೇ ಹೆಚ್ಚಾಗಿ ಕೇವಲ ಬೆವರು ಸುರಿಸುವುಕ್ಕೇ ಕಾಯಕ ಸೀಮಿತವಾಗಿದೆ. ಬೆವರಿಗೆ ತಕ್ಕ ಬೆಲೆ ಪಡೆಯುವುದು ಸಾಧ್ಯವಾಗಿಲ್ಲ. ಮುಖ್ಯವಾಹಿನಿಯಿಂದ ದೂರ ಮತ್ತು ಭಿನ್ನವಾಗಿ ಹರಿಯುತ್ತ ಬಂದಿರುವ ಈಶಾನ್ಯ ಜಿಲ್ಲೆಗಳ ಭವ್ಯ ಪರಂಪರೆಯು ವರ್ತಮಾನದ ಬಿಸಿಲಿನಲ್ಲಿ ಮಸುಕಾಗಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು